1918ರ ಖೇಡಾ ಸತ್ಯಾಗ್ರಹವು ಬ್ರಿಟೀಷ್‌ ಭಾರತದ ಗುಜರಾತಿನ ಖೇಡಾ ಜಿಲ್ಲೆಯಲ್ಲಿ ರೈತರ ಹಿತಾಸಕ್ತಿಗಳ ರಕ್ಷಣೆಗೆ ನಡೆದ ಸತ್ಯಾಗ್ರಹವಾಗಿದ್ದು, ಚಂಪಾರಣ್‌ ಸತ್ಯಾಗ್ರಹದ ನಂತರ ಬ್ರಿಟೀಷ್‌ ಸರ್ಕಾರದ ಧೋರಣೆಗಳ ವಿರುದ್ಧ ಹಮ್ಮಿಕೊಂಡ ಎರಡನೇ ದೊಡ್ಡ ಚಳುವಳಿಯಾಗಿದೆ ಹಾಗೂ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. == ನಾಯಕರು == ಮಹಾತ್ಮ ಗಾಂಧಿ ಚಳುವಳಿಯ ನಾಯಕತ್ವವನ್ನು ವಹಿಸಿದ್ದರು ಹಾಗೂ ಅವರೊಂದಿಗೆ ಸರ್ದಾರ್ ವಲ್ಲಭಬಾಯಿ ಪಟೇಲರು ಪ್ರಮುಖ ನಾಯಕರಾಗಿದ್ದರು. ಉಳಿದಂತೆ, ಇಂದುಲಾಲ್ ಯಗ್ನಿಕ್, ಶಂಕರಲಾಲ್ ಬ್ಯಾಂಕರ್, ಮಹದೇವ್ ದೇಸಾಯಿ, ನರಹರಿ ಪರೀಕ್, ಅಮ್ರಿತ್‌ ಲಾಲ್‌ ಥಕ್ಕರ್‌, ಮೋಹನ್ ಲಾಲ್ ಪಾಂಡ್ಯ ಮತ್ತು ರವಿಶಂಕರ್ ವ್ಯಾಸ್. == ಹಿನ್ನೆಲೆ == ಪ್ಲೇಗ್, ಬರ, ಕ್ಷಾಮ ಮತ್ತು ಬೆಲೆ ಏರಿಕೆಗಳಿಂದ‌ ಖೇಡಾದ ರೈತರು ಆಗಾಗಲೇ ಬೆಳೆ ನಷ್ಟವನ್ನು ಅನುಭವಿಸುತ್ತಾ ಕಂಗಾಲಾಗಿದ್ದರು. ಕಾರಣ ಖೇಡಾದ ರೈತರು ಮತ್ತು ಪಟಿದಾರರು ವಾರ್ಷಿಕ ತೆರಿಗೆ ವಿನಾಯಿತಿಯನ್ನು ಆಗ್ರಹಿಸಿ, ಬ್ರಿಟೀಷ್‌ ಸರ್ಕಾರದ ಮೊರೆ ಹೋದರು. ಪಾರಿಸ್ಥಿತಿಯ ಕುರಿತಾಗಿ ಅಮ್ರಿತ್‌ ಲಾಲ್‌ ಥಕ್ಕರ್‌ ವರದಿಯೊಂದನ್ನು ಸಿದ್ಧಪಡಿಸಿ ಗುಜರಾತಿನ ಕಮೀಷನರರ ಗಮನಕ್ಕೂ ತಂದಿದ್ದರು. ಜೊತೆಗೆ ಮೋಹನ್ ಲಾಲ್‌ ಪಾಂಡ್ಯ ಮತ್ತು ಶಂಕರಲಾಲ್‌ ಫರೀಕರು ಗಾಂಧಿ ಚಳುವಳಿಗೆ ಧುಮುಕುವ ಮುನ್ನವೇ ಬಾಂಬೆ ಶಾಸನ ಸಭೆಯಲ್ಲಿ ಸರ್ದಾರ್‌ ಪಟೇಲರ ಮತ್ತು ಗೋಕುಲ್‌ ದಾಸ್‌ ಫರೇಖ್‌ರ ಮುಖಾಂತರ ವಿಚಾರ ಮಂಡಿಸಿದ್ದರು. ಆದರೆ ಇದರಿಂದ ಯಾವುದೇ ಲಾಭವಾಗಲಿಲ್ಲ. ಬದಲಾಗಿ, ತೆರಿಗೆ ಪಾವತಿಸದಿದ್ದಲ್ಲಿ ರೈತರ ಆಸ್ತಿಗಳನ್ನು ಜಪ್ತಿ ಮಾಡುವುದಾಗಿ ಹಾಗೂ ಅವರನ್ನು ಬಂಧಿಸುವುದಾಗಿಯೂ ಸರ್ಕಾರ ಬೆದರಿಕೆ ಹಾಕಿತು. == ಹೋರಾಟದ ಗತಿ == ಸರ್ಕಾರದ ಭೂ ಕಂದಾಯ ನಿಯಮದಂತೆ ೪ ಆಣೆಗೂ ಕಡಿಮೆ ಬೆಳೆಯ ಫಸಲು ಬಂದ ರೈತರಿಗೆ ವಾರ್ಷಿಕ ತೆರಿಗೆ ವಿನಾಯಿತಿ ನೀಡಬೇಕಾಗಿತ್ತು. ಸರ್ಕಾರದ ಅಧಿಕೃತ ವರದಿ ಖೇಡಾದ ರೈತರ ಬೆಳೆಗಳು ೪ ಆಣೆಗೂ ಅಧಿಕವಾಗಿವೆ ಎಂದು ದಾಖಲಿಸಿದ್ದವು. ಆದರೆ ವಾಸ್ತವವಾಗಿ ರೈತರ ಬೆಳೆಗಳು ೪ ಆಣೆಗೂ ಕಡಿಮೆ ಫಸಲಿನದ್ದಾಗಿದ್ದವು. ಖೇಡಾದ ರೈತರು ಪ್ರತಿಭಟಿಸುವ ಸಂದರ್ಭ ಗಾಂಧಿ ಗುಜರಾತ್‌ ಸಭಾದ ಅಧ್ಯಕ್ಷರಾಗಿದ್ದರು. ಗಾಂಧಿ ಇದನ್ನು ಪರಿಗಣಿಸಿ, ಕಂದಾಯ ವಿನಾಯಿತಿ ಕೋರಿ ಹಲವಾರು ಅರ್ಜಿಗಳನ್ನು ಸರ್ಕಾರಕ್ಕೆ ಬರೆದರೂ ಯಾವುದೇ ಫಲ ಸಿಗಲಿಲ್ಲ. ಕ್ರಮೇಣ ಅವರು ಅವರ ಸಹಚರರು ಮತ್ತು ರೈತರೊಡನೆ ಸಮಾಲೋಚಿಸಿ ಸತ್ಯಾಗ್ರಹಕ್ಕೆ ಆಗ್ರಹಿಸಿದರು. ಖೇಡಾದ ವಕೀಲರಾಗಿದ್ದ ಪಟೇಲರ ಮತ್ತು ಇಂದುಲಾಲ್‌ ಯಗ್ನಿಕ್ ರು ಗಾಂಧಿಯೊಂದಿಗೆ ಕೈ ಜೋಡಿಸಿ ಚಳುವಳಿಯನ್ನು ಅಹಮದಾಬಾದ್‌ ಮತ್ತು ವಡೊದರ ಜಿಲ್ಲೇಗಳಿಗೂ ವಿಸ್ತರಿಸಿದರು. ಶಂಕರಲಾಲರು, ಮಹದೇವ್‌ ದೇಸಾಯಿ, ನರಹರಿ ಪರೀಕ್‌, ಮೋಹನ್ಲಾಲ್‌ ಪಾಂಡ್ಯ ಮತ್ತು ರವಿಶಂಕರ ವ್ಯಾಸರು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ, ಚಳುವಳಿಯನ್ನು ಇನ್ನಷ್ಟು ವಿಸ್ತರಿಸಿದರು. ಗಾಂಧಿ ಶಕ್ತಿಯಿದ್ದರೂ ಯಾವುದೇ ಬೆದರಿಕೆಗೊಳಪಡದೆ ನಯಾಪೈಸೆಯನ್ನೂ ತೆರಿಗೆಯಾಗಿ ಪಾವತಿಸದಂತೆ ರೈತರಲ್ಲಿ ಮನವಿ ಮಾಡಿಕೊಂಡರು. ಖೇಡಾದ ರೈತರಿಂದ ಬ್ರಿಟೀಷ್‌ ಬೊಕ್ಕಸಕ್ಕೆ ಒಂದು ನಾಣ್ಯವೂ ಸಂದಾಯವಾಗಲಿಲ್ಲ. == ಪರಿಣಾಮಗಳು == ಚಳುವಳಿ ವಿಸ್ತರಿಸುತ್ತಿದ್ದಂತೆ ಎಚ್ಚೆತ್ತ ಸರ್ಕಾರವು ಒಂದು ವರ್ಷದವರೆಗೆ ಖೇಡಾದಲ್ಲಿ ಕಂದಾಯ ಸಂಗ್ರಹಿಸದಂತೆ ಮೇಲ್ನೋಟಕ್ಕೂ, ಪಾವತಿಸುವ ಶಕ್ತಿ ಇರುವವರಿಂದ ಸಂಗ್ರಹಿಸುವಂತೆ ಅಧಿಕಾರಿಗಳಿಗೂ ಗುಪ್ತ ಆದೇಶ ಹೊರಡಿಸಿತು. ಇದರ ಬಗ್ಗೆ ಅರಿವಿದ್ದರೂ, ಅವರ ಅಪೇಕ್ಷೆಯೂ ಇದೇ ಆಗಿದ್ದುದರಿಂದ ಗಾಂಧಿ ಆದೇಶವನ್ನು ಒಪ್ಪಿಕೊಂಡು ಚಳುವಳಿಯನ್ನು ಹಿಂಪಡೆದರು. ಚಂಪಾರಣ್‌, ಅಹಮದಾಬಾದ್‌ ಗಿರಣಿ ಮುಷ್ಕರ ಮತ್ತು ಖೇಡಾ ಸತ್ಯಾಗ್ರಹಗಳು ಗಾಂಧಿಯಲ್ಲಿ ರಾಜಕೀಯಾಸಕ್ತಿಯನ್ನು ಮೂಡಿಸಿ, ಮುಂದೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಗಾಂಧಿಯುಗವು ಆರಂಭವಾಗಲೂ ನಾಂದಿ ಹಾಡಿದವು == ಇವನ್ನೂ ನೋಡಿ == ಚಂಪಾರಣ್‌ ಸತ್ಯಾಗ್ರಹ‌ ಭಾರತೀಯ ಸ್ವಾತಂತ್ರ್ಯ ಚಳುವಳಿ ಅಸಹಕಾರ ಚಳುವಳಿ ಮಹಾತ್ಮ ಗಾಂಧಿ ಸತ್ಯಾಗ್ರಹ ಸರ್ದಾರ್‌ ವಲ್ಲಭಬಾಯಿ ಪಟೇಲ್ == ಉಲ್ಲೇಖಗಳು ==